Saturday, July 31, 2010

ಆ ಹೃದಯವನೇ ಕೊಚ್ಚುವೆಯಾ?

ಒಂದೇ ಮಣ್ಣಿನ ಮಕ್ಕಳು ನಾವು
ಒಂದೇ ನೀರನು ಕುಡಿದವರು
ಒಂದೇ ಗಾಳಿಯ ಸೇವಿಸಿ ಬದುಕಿ
ಒಂದೇ ಅಂಬರದಡಿ ಉಳಿದವರು |

ಆದರೆ ಒಂದೇ ಮನವಿಲ್ಲೇಕೆ?
ಪ್ರೀತಿಯ ತೆಕ್ಕೆಗೆ ಸಿಗಲೊಲ್ಲೇಕೆ?
ನಿನ್ನನು ನಾವು ಹೊಡೆದದ್ದಿಲ್ಲ ; ಬಡಿದದ್ದಿಲ್ಲ ;
ಕಡಿದದ್ದಂತೂ ಇಲ್ಲವೇ ಇಲ್ಲ ;
ಆದರೆ ನಮ್ಮನು ಕಡಿಯುವಿಯೇಕೆ?
ಜರ್ಜರ ಗಾಯವ ಮಾಡುವಿಯೇಕೆ?
ಬರ್ಬರ ಕೃತ್ಯವ ಗೈಯುವಿಯೇಕೆ?

ಕಾಡುಪ್ರಾಣಿಗಳ ಭಯವೆಮಗಿಲ್ಲ
ಹಕ್ಕಿ ಪಕ್ಷಿಗಳ ದಿಗಿಲೆಮಗಿಲ್ಲ
ಭಯವೆಂದಿದ್ದರೆ ನಿನ್ನೊಬ್ಬನದೇ
ದಿಗಿಲೆಂದಿದ್ದರೆ ನಿನ್ನೊಬ್ಬನದೇ
ಮಾನವ ನಿನಗೆ ಮತಿಯಿನಿತಿಲ್ಲ
ನಮ್ಮನು ಕಡಿದರೆ ಗತಿನಿನಗಿಲ್ಲ

ನಿನಗರಿವಿಲ್ಲದೆ ಉಸಿರನು ಕೊಟ್ಟು
ನಿನಗರಿವಿಲ್ಲದೆ ಹಸಿರನು ಕೊಟ್ಟು
ಬೇಡಿಕೆಯಿಲ್ಲದೆ ಹಣ್ಣನು ಕೊಟ್ಟು
ತಂಟೆಯ ಮಾಡದೆ ನೆರಳನು ಕೊಟ್ಟು
ತಂಪಗೆ ನಿನ್ನ ದಣಿವಾರಿಸುವೆವು
ನೆಂಟನ ತೆರದಿ ಸತ್ಕರಿಸುವೆವು;

ಪ್ರೀತಿಯ ಕರಗಳಲಪ್ಪಲು ನಾವು
ಆ ಕರಗಳನೇ ಕಡಿಯುವೆಯಾ?
ಅರ್ತಿಯ ಹೃದಯವ ತೆರೆಯಲು ನಾವು
ಆ ಹೃದಯವನೇ ಕೊಚ್ಚುವೆಯಾ?

ನಿನ್ನನು ಬಯ್ಯಲು ಬಾಯೆಮಗಿಲ್ಲ
ತಿವಿಯಲು ನಿನ್ನನು ಕೋಡೆಮಗಿಲ್ಲ
ತಪ್ಪಿಸಿ ಓಡಲು ಕಾಲೆಮಗಿಲ್ಲ
ಸೆಟೆದು ನಿಲ್ಲುವ ಶಕ್ತಿಯೂ ಇಲ್ಲ
ನೊಂದಿಹ ನಮ್ಮನು ಬಡಿಯದಿರು
ಪ್ರೀತಿಯ ಹೃದಯವ ಕೊಚ್ಚದಿರು

ರಚನೆ : ಕೆ. ಸಿ. ಚಂದ್ರಶೇಖರ್

Saturday, July 24, 2010

ಕಂದ ಬಂದು ಅಂದ ತಂದ

ಕಂದ ಬಂದು ಮನೆಗೆ ಅಂದ ತಂದಾನೇ s s s
ಚೆಂದದಿಂದ ಪರಿಮಳವ ಸೂಸ್ಯಾನೇ s s s||ಪ||

ಅವನ ಪುಟ್ಟ ಎಸಳು ಕೈಗಳೆಷ್ಟು ಬೆಚ್ಚನೇ !
ಅವನ ಅಮಲ ಕಣ್ಣನೋಟವೆಷ್ಟು ಸ್ವಚ್ಛನೇ !
ಅವನ ಮನದ ಒಳಗೆ ಇರುವುದೆಷ್ಟು ಕಲ್ಪನೇ !
ಅವನ ನಗುವು ನಿದ್ದೆಯಲ್ಲಿ ಯಾರ್ಯಾರೊಡನೇ ||೧||

ಅವನ ನಗುವು ಮನೆಯ ತುಂಬ ದನಿಯಗೊಡುತಿದೇ
ಅವನ ಅಳುವು ಮನೆಯ ಜನರ ಮನವ ಮಿಡಿದಿದೇ
ಅವನ ನಗುವಿನಳುವಿನಲ್ಲಿ ಏನು ಮಹತಿದೇ
ಅವನೆ ಬಲ್ಲ ಅವನೆ ನಲ್ಲ ಇಂದು ಮುಂದಕೇ ||೨||

ಅವನ ತುಟಿಗಳಲ್ಲಿ ಹಾಲು ಜೇನು ಸುರಿದಿದೇ
ಅವನ ಕಾಲಬೆರಳು ಅದರ ಸವಿಯ ಸವಿದಿದೇ
ಅವನ ಪುಟ್ಟ ಕಾಲಿನೊದೆತ ಹಿಗ್ಗು ತಂದಿದೇ
ಅವನ ಕೈಯ ಹೊಡೆತಗಳಿಗೆ ಸಗ್ಗವೆಟುಕಿದೇ ||೩||

"ಅಂಬಾ ಅಂಬಾ" ಎಂದು ಕರೆವ ಕರುವಿನಂದದೀ
"ಅಮ್ಮಾ ಅಮ್ಮಾ" ಎಂದು ಕರೆವ ತೊದಲು ನಾದದೀ
ಕರೆದ ಕರುವಿನೆಡೆಗೆ ಬರುವ ಗೋವಿನಂದದೀ
ಕರೆದ ಕಂದನೆಡೆಗೆ ತಾಯಿ ಬರುವಳಂದದೀ ||೪||


ರಚನೆ : ಕೆ. ಸಿ. ಚಂದ್ರಶೇಖರ್

Wednesday, July 21, 2010

ಹಾರೈಕೆ


ಏನಾದರೇನು? ಹೇಗಾದರೇನು?
ಜಡತನವು ದೂರಾಗಬೇಕು
ಸಿರಿಬಂದರೇನು? ಸಿರಿ ಹೋದರೇನು?
ಸತ್ಯತೆಯು ನೆಲೆಯಾಗಬೇಕು.


ಇಡು ಹೆಜ್ಜೆ ಮುಂದೆ, ಬರಬೇಡ ಹಿಂದೆ
ಎಡವುತ್ತ , ಬೀಳುತ್ತ , ಬಳಲುತ್ತ ಮುಂದೆ,
ಜಡವನ್ನು ಕಳೆದು, ಚೇತನವ ಪಡೆದು
ಎಡರುಗಳನ್ನೆಲ್ಲಾ ಬದಿದೋಡಿಸು.

ನಿಂದಿಪರು ಹಲರು, ವಂದಿಪರು ಕೆಲರು,
ನಿಂದ್ಯಾಭಿನಂದನೆಯ ಗೊಡವೆ ಬೇಡ ,
ಒಂದೇ ಮಾತಿನಲ್ಲಿ ದ್ವಂದ್ವಾರ್ಥ ಬರದಂತೆ
ಎಂದೆಂದಿಗೂ ನೀನು ಚುರುಕಾಗಿರು

ಸುಖ ದುಃಖವೆರಡೂ, ಒಂದಾಗಿ ಹೆಣೆದು ,
ಮುಖವಬಾಡಿಸುವವು ಅತಿಯಾಗಿ
ಸಖ ನೀನು ಮಾತ್ರ ಕೆಚ್ಚನ್ನು ತಳೆದು,
ಸುಖ ದುಃಖಗಳ ಸಹಿಸು ಸ್ಥಿರನಾಗಿ.

ಕಲಿತಿರುವೆನೆಂದು , ಪಳಗಿರುವೆನೆಂದು,
ಹೆಮ್ಮೆಯಲಿ ಮೆರೆಯುವುದು ಸರಿಯಲ್ಲ,
ಒಮ್ಮತ ಸೌಹಾರ್ದ ಅಂಕುರಿಸಲೆಂದು
ನಡೆದಂತೆ ನುಡಿಬೇಕು ಸವಿಸೊಲ್ಲ.

ಅಂತರಂಗದ ಬಯಕೆ ಚಿಂತೆಗಳ ಪರಿಹಾರ,
ಶಾಂತ ರೀತಿಯಲಿ ಕೈಗೂಡಬೇಕು.
ಜಂತು ಜೀವಿಗಳ ಧ್ಯೇಯದ ಸಾಕ್ಷಾತ್ಕಾರ
ಸಂತರ ತಪದಂತೆ ಸಿದ್ದಿಸಬೇಕು.


ರಚನೆ :
ಕೆ. ಸಿ. ಚಂದ್ರಶೇಖರ್
(ಕುದುರೇರ ಚೆನ್ನಬಸಪ್ಪ ಚಂದ್ರಶೇಖರ್)
ಕೊಡ್ಲಿಪೇಟೆ , ಕೊಡಗು ಜಿಲ್ಲೆ , ಕರ್ನಾಟಕ, ಭಾರತ