Saturday, July 31, 2010

ಆ ಹೃದಯವನೇ ಕೊಚ್ಚುವೆಯಾ?

ಒಂದೇ ಮಣ್ಣಿನ ಮಕ್ಕಳು ನಾವು
ಒಂದೇ ನೀರನು ಕುಡಿದವರು
ಒಂದೇ ಗಾಳಿಯ ಸೇವಿಸಿ ಬದುಕಿ
ಒಂದೇ ಅಂಬರದಡಿ ಉಳಿದವರು |

ಆದರೆ ಒಂದೇ ಮನವಿಲ್ಲೇಕೆ?
ಪ್ರೀತಿಯ ತೆಕ್ಕೆಗೆ ಸಿಗಲೊಲ್ಲೇಕೆ?
ನಿನ್ನನು ನಾವು ಹೊಡೆದದ್ದಿಲ್ಲ ; ಬಡಿದದ್ದಿಲ್ಲ ;
ಕಡಿದದ್ದಂತೂ ಇಲ್ಲವೇ ಇಲ್ಲ ;
ಆದರೆ ನಮ್ಮನು ಕಡಿಯುವಿಯೇಕೆ?
ಜರ್ಜರ ಗಾಯವ ಮಾಡುವಿಯೇಕೆ?
ಬರ್ಬರ ಕೃತ್ಯವ ಗೈಯುವಿಯೇಕೆ?

ಕಾಡುಪ್ರಾಣಿಗಳ ಭಯವೆಮಗಿಲ್ಲ
ಹಕ್ಕಿ ಪಕ್ಷಿಗಳ ದಿಗಿಲೆಮಗಿಲ್ಲ
ಭಯವೆಂದಿದ್ದರೆ ನಿನ್ನೊಬ್ಬನದೇ
ದಿಗಿಲೆಂದಿದ್ದರೆ ನಿನ್ನೊಬ್ಬನದೇ
ಮಾನವ ನಿನಗೆ ಮತಿಯಿನಿತಿಲ್ಲ
ನಮ್ಮನು ಕಡಿದರೆ ಗತಿನಿನಗಿಲ್ಲ

ನಿನಗರಿವಿಲ್ಲದೆ ಉಸಿರನು ಕೊಟ್ಟು
ನಿನಗರಿವಿಲ್ಲದೆ ಹಸಿರನು ಕೊಟ್ಟು
ಬೇಡಿಕೆಯಿಲ್ಲದೆ ಹಣ್ಣನು ಕೊಟ್ಟು
ತಂಟೆಯ ಮಾಡದೆ ನೆರಳನು ಕೊಟ್ಟು
ತಂಪಗೆ ನಿನ್ನ ದಣಿವಾರಿಸುವೆವು
ನೆಂಟನ ತೆರದಿ ಸತ್ಕರಿಸುವೆವು;

ಪ್ರೀತಿಯ ಕರಗಳಲಪ್ಪಲು ನಾವು
ಆ ಕರಗಳನೇ ಕಡಿಯುವೆಯಾ?
ಅರ್ತಿಯ ಹೃದಯವ ತೆರೆಯಲು ನಾವು
ಆ ಹೃದಯವನೇ ಕೊಚ್ಚುವೆಯಾ?

ನಿನ್ನನು ಬಯ್ಯಲು ಬಾಯೆಮಗಿಲ್ಲ
ತಿವಿಯಲು ನಿನ್ನನು ಕೋಡೆಮಗಿಲ್ಲ
ತಪ್ಪಿಸಿ ಓಡಲು ಕಾಲೆಮಗಿಲ್ಲ
ಸೆಟೆದು ನಿಲ್ಲುವ ಶಕ್ತಿಯೂ ಇಲ್ಲ
ನೊಂದಿಹ ನಮ್ಮನು ಬಡಿಯದಿರು
ಪ್ರೀತಿಯ ಹೃದಯವ ಕೊಚ್ಚದಿರು

ರಚನೆ : ಕೆ. ಸಿ. ಚಂದ್ರಶೇಖರ್

2 comments: