ಮಾನಸ ಪೂಜೆಯ ಮಾಡುತಲಿದ್ದರು ಸೋದೇಮಠದಲಿ ಸ್ವಾಮಿಗಳು |
ಕಲ್ಪತ ಮಾಲೆಯು ಕಲ್ಪಕಿರೀಟದಿ ತೂರದೆ ಇದ್ದರು ವ್ಯಸನದೊಳು||೨೩||
ವಾದಿರಾಜರ ಕಷ್ಟವ ತಿಳಿದನು ಕನಕನು ದಿವ್ಯ ಜ್ಞಾನದಲಿ |
ಬೇರೆ ಕಿರೀಟವ ಮಾಡಿರಿ ಎಂದು ಹೇಳಿ ಕಳಿಸಿದನು ವಿನಯದಲಿ ||೨೪||
ಕನಕದಾಸನಮಹಾತ್ಮ್ಯ ತಿಳಿದು ಗುರುಗಳಿಗಾಯಿತು ಆಶ್ಚರ್ಯ |
ಕೃಷ್ಣನ ದರ್ಶನ ಮಾಡಿಸು ಎಂದು ಗಂಟುಬಿದ್ದರು ಗುರುವರ್ಯ ||೨೫||
ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ?
ಎನ್ನುತ ಕನಕನು ಕೇಳಲು ನಾಯಿಯು ನುಡಿಯಿತು ನಡೆದುದ ಬರಾಬರಿ ||೨೬||
ನಾಯಿರೂಪದ ನಾರಾಯಣನನು ಕಾಣದೆ ಹೋದರು ಸ್ವಾಮಿಗಳು |
ಮಾಯಾಲೀಲೆಯ ನೋಡಲು ಆಗ ನೆನೆದರು ಚಿತ್ತ ಶುದ್ದಿಯೊಳು ||೨೭||
ನೆಲದಮೇಲೆ ಹಿಂಗಾಲನು ಇಟ್ಟು ಗುರುಗಳ ಹೆಗಲಲಿ ಮುಂಗಾಲಿಟ್ಟು
ಹಯರೂಪದಿ ಹರಿ ದರ್ಶನ ವಿಟ್ಟನು ಕನಕನ ಧ್ಯಾನಕೆ ಓ ಗೊಟ್ಟು ||೨೮||
ಮುಕ್ತಿಗೆ ಸಾಧನ ಯಾವುದು ಎಂದು ವ್ಯಾಸರಾಯರು ಕೇಳಿದರು|
ಶಕ್ತಿಯು ಅದಕೆ 'ನಾ-ಸತ್ತರೆ' ಎಂದು ಕನಕರು ಹೇಳಿದರು ||೨೯||
ಕನಕನ ಮಾತನು ಕೇಳಿದ ಶಿಷ್ಯರು ನಕ್ಕರು ತಾವು ಘೊಳ್ಳೆಂದು|
'ನಾ' ಎಂದರೆ ಗರ್ವವು ಎನ್ನಲು ಗುರುಗಳು ನುಡಿದರು 'ಸೈ' ಎಂದು ||೩೦ ||
ಪೆಚ್ಚು ಬಿದ್ದರು ನಕ್ಕ ಶಿಷ್ಯರು ಕನಕನ ಅರ್ಥವ ಕೇಳುತಲಿ |
ಹುಚ್ಚು ಮಾತನು ಬಿಚ್ಚಿ ಓಡಿಸಿ ಎಂದನು ಅವರಿಗೆ ವಿನಯದಲಿ ||೩೧ ||
ತಿಂಮ,ಕನಕ,ಕನಕನಾಯಕ,ಕನಕದಾಸನ ರೂಪದಲಿ |
ದೇವನ ಕಂಡು,ದೇವನ ತೋರಿಸಿ,ಅಮರನಾದನು ಭುವಿಯಲ್ಲಿ ||೩೨ ||
ಚಿತ್ತ ಭಿತ್ತಿಯಲಿ ಭಕ್ತಿಯ ಬೀಜವ ಕನಕದಾಸನು ಬಿತ್ತಿದನು |
ತೊಂಭತ್ತೆಂಟು ವರ್ಷ ತಾ ಬಾಳಿ,ತನ್ನಯ ಅಸುವನು ನೀಗಿದನು ||೩೩||
ಮೋಹ(ನ) ತರಂಗಿಣಿ ನಳ ಚರಿತ್ರೆ ಹರಿ ಭಕ್ತಿ(ಯ) ಸಾರಗಳು |
ರಾಮಧಾನ್ಯ ಚರಿತ್ರೆಗಳೆಲ್ಲಾ ಕನಕದಾಸನ ಗ್ರಂಥಗಳು ||೩೪||
ಓದಿರಿ ಕನ್ನಡ ನಾಡಿನ ಜನರೇ ಕನಕ ಗ್ರಂಥವ ಭಕ್ತಿಯಲಿ
ಮಾಡಿರಿ ಕೇಶವರಾಯನ ಧ್ಯಾನವ ಪಡೆಯಿರಿ ಮುಕ್ತಿಯ ಪರದಲ್ಲಿ ||೩೫||
ರಚನೆ : ಕೆ. ಸಿ. ಚಂದ್ರಶೇಖರ್
ಕೊಡ್ಲಿಪೇಟೆ
No comments:
Post a Comment