೧೪-೫-೧೯೬೫ ರ ಕನಕ ಜಯಂತಿಗೋಸ್ಕರ ಬರೆದ ಲಾವಣಿ.
ರಚನೆ : ಕೆ ಸಿ ಚಂದ್ರಶೇಖರ್ ಕೊಡ್ಲಿಪೇಟೆ
ಕನ್ನಡ ನಾಡಿನ ಕನ್ನಡ ಜನರೇ ಕೇಳಿರಿ ನೀವು ಒಲವಿಂದ |ರಚನೆ : ಕೆ ಸಿ ಚಂದ್ರಶೇಖರ್ ಕೊಡ್ಲಿಪೇಟೆ
ಕನಕದಾಸರ ಕಥೆಯನು ಪೇಳುವೆ ಆಲಿಸಿ ನೀವು ಮುದದಿಂದ ||ಪ||
ಧಾರವಾಡದ ಕೋಡ ತಾಲೂಕಿನ ಬಾಡ ಎಂಬುವ ಊರಲ್ಲಿ |
ಹರಿಯಪವಾಡವ ತಿಳಿಸಲು ಹುಟ್ಟಿದ ಕನಕ ಕುರುಬರ ಕುಲದಲ್ಲಿ ||೧||
ತಂದೆಯನಾಮವು ಬೀರೇಗೌಡ ಮಾಡುತಲಿದ್ದನು ಗೌಡಿಕೆಯ |
ಒಂದೇ ಮನದಲಿ ನೆನೆಯುತಲಿದ್ದನು, ತಿರುಪತಿದೇವನ ಪದದಡಿಯ ||೨||
ಮಡದಿ ಬಚ್ಚಿಯ ಪ್ರಾಯಸಂದರೂ ಕಂದನ ಭಾಗ್ಯವು ಇಲ್ಲವಾಯ್ತು |
ಒಡನೆ ಗೌಡನ ದೇವರ ಧ್ಯಾನವು ತಿರುಪತಿಯಲ್ಲಿ ಜೋರಾಯ್ತು ||೩||
ವೆಂಕಟರಮಣನು ಬ್ರಾಹ್ಮಣ ರೂಪದಿ ಬಂದನು ಗೌಡನ ಕನಸಿನಲ್ಲಿ |
ಉಂಡೆ ಪ್ರಸಾದವ ಕೊಟ್ಟಂತಾಯಿತು ಹರುಷವು ತುಂಬಿತು ಮನದಲ್ಲಿ ||೪||
ಹುಟ್ಟಿದ ಕುವರನು ಬಚ್ಚಿಯ ಉದರದಿ ಹದಿನಾರನೆಯ ಶಕದಲ್ಲಿ |
ಇಟ್ಟರು ತಿಂಮ ಎಂಬುವ ನಾಮವ ವೆಂಕರಮಣನ ನೆನಹಲ್ಲಿ ||೫||
ಬೆಳೆದನು ತಿಂಮನು ಭಗವನ್ನಾಮ ಭಗವದ್ಭಕ್ತರ ನೇಹದಲಿ |
ಅಳಿದನು ಆತನ ಒಲವಿನ ಪಿತನು ಆತನ ಆರನೆ ವಯಸಿನಲಿ ||೬||
ತನಗೆ ಸಿಕ್ಕಿದ ನಿಕ್ಷೇಪವನು ತಿಂಮನು ದಾನವ ಮಾಡಾಯ್ತು |
ದೀನ ದಲಿತರ ಜಿಹ್ವೆಲಿ ಅವಗೆ ಕನಕನೆಂಬುವ ಹೆಸರಾಯ್ತು||೭||
ಇಂತು ತಿಂಮನು ಕನಕನಾದನು ಸಂತನಾಗುವಯೋಗದಲಿ|
ಸಂತಸದಿಂದಲಿ ಆತನ ಧ್ಯಾನವು ಹರಿಯಿತು ರಮಣನ ಚರಣದಲಿ ||೮||
ಕನಕನ ಪರಹಿತ ನಿಷ್ಥೆಯಿಂದಲಿ , ದೇವನಾದನು ಸಂತುಷ್ಟ |
ದಿನದಿಂ ದಿನಕೆ ಜ್ಞಾನ ಪೌರುಷ ಹೆಚ್ಚಲು ಆದನು ಉತ್ಕೃಷ್ಟ ||೯ ||
ಹರಕೆ ಹೊತ್ತರು ಕನಕನ ಹೆಸರಲಿ, ಇಷ್ಟಸಿದ್ಧಿಯು ಜನಕಾಯ್ತು |
ತಿರುಪತಿ ಬದಲು ಕಾಣಿಕೆಯೆಲ್ಲವು ಕನಕ ಭಂಡಾರದಿ ಜಮೆಯಾಯ್ತು ||೧೦||
ಕಾಗಿನೆಲೆಯ ಉದ್ಭವ ಮೂರ್ತಿ, ಆದಿಕೇಶವ ಸ್ವಾಮಿಗೆ |
ಮಂಟಪ ಕಟ್ಟಿಸಿ ಉತ್ಸವ ಮಾಡಿದ ಕನಕನುದಿವ್ಯ ಮೂರ್ತಿಗೆ ||೧೧||
ಏಕನಿಷ್ಠೆಯಿಂ ದ್ವಾದಶ ವರ್ಷ, ಸಾಗಿತು ಆತನ ಉಪಾಸನೆ |
ಇಂತಿರಲೊಮ್ಮೆ ಸ್ವಪ್ನದಿ ಆಯಿತು ರಮಣನ ಸೇವೆಗೆ ಅಹವಾನೆ ||೧೨||
ಕೇಶವದೇವನ ನಿಷ್ಠೆಯ ತೊರೆಯಲು ಕನಕನ ಮನಕೆ ಕಹಿಯಾಯ್ತು |
ವೆಂಕಟ ರಮಣನ ಸೇವೆಯ ಮಾಡದೆ ಹೊಟ್ಟೆಯ ಶೂಲೆಯು ಜೋರಾಯ್ತು ||೧೩||
ಬಂದೆವಯ್ಯಾ ಗೋವಿಂದಶೆಟ್ಟಿಯೇ ಎಂಬುವ ಹಾಡನು ಹಾಡುತಲಿ |
ವಂದನೆ ಗೈದನು ತಿರುಪತಿಯಲ್ಲಿ ಶೂಲೆಯು ಅಡಗಿತು ಕರುಣೆಯಲಿ ||೧೪||
ಆಗಿನಕಾಲದಿ ದಾಸ ಕೂಟದಲಿ ವ್ಯಾಸರಾಯರೇ ಶಿರೋಮಣಿ |
ಯೋಗಾಭ್ಯಾಸಕೆ ಕನಕನು ಅವರಲಿ ಆದನು ಶಿಷ್ಯರ ಶಿಖಾಮಣಿ ||೧೫||
ಕುರುಬರ ಕನಕನ ಹಿರಿಮೆಯಕಂಡು ಹಿರಿಯ ಶಿಷ್ಯರು ಕರುಬಿದರು |
ವರಗುರು ಅವರಿಗೆ ಪಾಠವ ಕಲಿಸಲು ಒಂದು ಪರೀಕ್ಷೆಯ ನಡೆಸಿದರು ||೧೬||
ಗುರುಗಳು ಕೊಟ್ಟ ಹಣ್ಣನು ತಿಂದರು ಮೂಲೆಮುಡುಕಲಲಿ ಗುಟ್ಟಿನಲಿ|
ಹರಿಯ ಇರವನು ಕಂಡನು ಕನಕನು ತಿನ್ನಲು ಹೋದ ಠಾವಿನಲಿ ||೧೭||
ತಿನ್ನದೆ ಹಣ್ಣನು ಹಿಂದಕೆ ತಂದು ಗುರುಗಳಿಗದನು ಒಪ್ಪಿಸಿದ |
ಚಿನ್ಮಯ ಮೂರ್ತಿಯ ಸರ್ವಸಾಕ್ಷಿತ್ವವ ಎಲ್ಲರ ಮನಕೂ ಮುಟ್ಟಿಸಿದ ||೧೮||
ಹಾಡನು ಕಟ್ಟುತ ಹಾಡನು ಹಾಡುತ ಭಕ್ತಿಯ ಬೀಜವ ಬಿತ್ತಿದನು |
ಬಿಡದೆ ಮಾಡಿರಿ ಒಡೆಯನ ಧ್ಯಾನವ ಎನ್ನುತ ತಾನು ತಿರುಗಿದನು||೧೯||
ಉಡುಪಿ ಕೃಷ್ಣನ ದರ್ಶನಕೆಂದು ನಡೆದನು ಕನಕನು ಪ್ರೀತಿಯಲಿ |
ಮಡಿ ಮಡಿಯೆಂದು ಕಾವಲಿನವರು ಅಟ್ಟಿದರಾತನ ಹಿಂಸೆಯಲಿ ||೨೦||
ದೇವಾಲಯದ ಹಿಂಬದಿಯಲ್ಲಿ ಹಾಡುತ ಕರೆದನು ದೇವನನು |
ದೇವಕಿ ನಂದನು ಪಡುವಕೆ ತಿರುಗಿ ಭಕ್ತಗೆ ದರ್ಶನ ನೀಡಿದನು ||೨೧||
ಕನಕನು ಕೃಷ್ಣನ ಕಂಡ ಕಿಂಡಿಗೆ ಕನಕಕಿಂಡಿಯೆಂಬ್ಹೆಸರಾಯ್ತು |
ಅನುದಿನ ಅವನ ದರ್ಶನ ಭಾಗ್ಯಕೆ ಕನಕ ಕಿಂಡಿಯೇ ಮೊದಲಾಯ್ತು ||೨೨||
ಮುಂದುವರಿಯುವುದು ......
No comments:
Post a Comment