Friday, October 18, 2024

ರವಿವಾಣಿ ಸಂಗ್ರಹ

ನೋಡಲಾಗದೇ ನಿನ್ನೀ ಇರುವನು
ಕಾಣಲಾಗದೇ ನಿನ್ನೀ ನಿರ್ಮಾಣವನು
ತಿಳಿಯದೇ ನಿನ್ನೀ ರಕ್ಷಣೆಯನು
ಎಲ್ಲಾ ತಾನೇ ಆವಿರ್ಭೂತ ವೆನ್ನುವ
ಹುಲು ಮಾನವಗೆ ದಿವ್ಯಚಕ್ಷು ನೀಡೋ ಲೋಕನಾಥ

ರವಿವಾಣಿ




ಕಾಲವಿದ್ದಾಗ ಒಳಿತು ಮಾಡು

ಕಾಲವಿಲ್ಲವೆಂದು ಮರುಗ ಬೇಡ
ಕಾಲ ಬರುವವರೆಗೆ ಕಾದರೆ
ಕಾಲ ತಡೆಯದೇ ಬಂದು
ಕಾಲನಳೆದೊಯ್ಯುವುದು ದಿಟ||

ರವಿವಾಣಿ


ಕೊಡುವುದೆಂತು

ಕೊಡಲು ಏನಿದೆ
ಬಿಡಲು ಏನಿದೆ
ಕೊಟ್ಟವನೂ , ಬಾಳಿಸಿದವನೂ
ಬಿಟ್ಟು ಬಾ ಎಂದಾಗ
ಓಡೋಡಿ ಅವನೊಡಲ ಸೆೇರುವುದೆೇ ಲೇಸು

ರವಿವಾಣಿ


ರಾಮ ಮಂದಿರ

ರಾಮ ರಾಮ ರಾಮ
ಅನುದಿನ ನೆನೆದರೆ ಆರಾಮ

ರಾಮ ರಾಮ ರಾಮ
ಪಾಲಿಸುವೆ ನಿನ್ನಾದರ್ಶಗಳ ರಘುರಾಮ

ರಾಮ ರಾಮ ರಾಮ
ಅಲ್ಲಾಗುತಿದೆ ನಿನ್ನ ಮಂದಿರ ಸೀತಾರಾಮ

ರಾಮ ರಾಮ ರಾಮ
ಇಲ್ಲೆನ್ನ ಮನ ನಿನ್ನ ಮಂದಿರ ಕರುಣಾರಾಮ

ರಾಮ ರಾಮ ರಾಮ
ನಿನ್ನೊಲುಮೆ ಇರಲಿ ಜೈಶ್ರೀರಾಮ¦¦

ರವಿವಾಣಿ

ರಾಮ ಮಂದಿರ

ರಾಮ ರಾಮ ರಾಮ
ಅನುದಿನ ನೆನೆದರೆ ನಿನ್ನ ಆರಾಮ
ಪಾಲಿಸುವೆ ನಿನ್ನಾದರ್ಶಗಳ ರಘುರಾಮ
ಅಲ್ಲಾಗುತಿದೆ ನಿನ್ನ ಮಂದಿರ ಸೀತಾರಾಮ
ಇಲ್ಲೆನ್ನ ಮನ ನಿನ್ನ ಮಂದಿರ ಕರುಣಾರಾಮ
ನಿನ್ನೊಲುಮೆ ಇರಲಿ ಜೈಶ್ರೀರಾಮ¦¦

ರವಿವಾಣಿ

ಎಲ್ಲಿ ಹುಟ್ಟಿದ್ದರೇನು ಹನುಮ

ಎಲ್ಲಿ ಹುಟ್ಟಿದ್ದರೇನು ಹನುಮ
ನಮ್ಮಕರುನಾಡ ಕಿಷ್ಕಿಂದೆಯಲ್ಲೋ
ಆಂಧ್ರದ ಅಂಗನಾದ್ರಿಯಲ್ಲೋ
ನಮ್ಮೆಲ್ಲರಮನದಲ್ಲಿರುವನಲ್ಲೋ
ಪುರಾಣ ಇತಿಹಾಸವಾಗುತ್ತಿದೆಯಲ್ಲೋ||

-ರವಿವಾಣಿ

ನಾನೆಂತು ಪೊಗಳಲಿ

ಬಿಟ್ಟೆಲ್ಲವ ಪೋಗುವುದೆಂದು ತಿಳಿದಿದ್ದರೂ
ಬಿಡಲಾಗದಂತೆ ಭ್ರಮೆಯಲಿರಿಸಿ
ಮಕ್ಕಳಾಟವ ನೋಡುತ ನಲಿವ ಜಗದೊಡೆಯ
ನಿನ್ನ ಲೀಲೆಯ ನಾನೆಂತು ಪೊಗಳಲಿ||

ರವಿವಾಣಿ


ಈ ದಿನದ ಅದ್ಭುತ

ಸೋಮಶೇಖರ ನಿಂದ ಹೊರಟಿತೊಂದು ಅದ್ಭುತವಾಣಿ
ಅದಕಂಡು ರಾಮ ಕೃಷ್ಣ ಗೋವಿಂದ ರಿಂದಾಯಿತು ಕಾವ್ಯವಾಣಿ
ಅರಿವೋ, ಹರಿವೋ, ಜ್ಞಾನವೋ, ವಿಜ್ಞಾನವೋ ಎಲ್ಲದಕೂ ಬೇಕು ದೈವವಾಣಿ||

ನೇಹವಿರಲಿ ಮನ ಮನ ಗಳ ಜೊತೆ
ನೇಹವಿರಲಿ ಪ್ರಕೃತಿಯ ಜೊತೆ
ನೇಹವಿರಲಿ ಪ್ರಾಣಿ ಪಕ್ಷಿ ಜಲಚರಗಳ ಜೊತೆ||

ರವಿವಾಣಿ..
ಸ್ನೇಹಿತರ ದಿನದ ಶುಭಾಶಯಗಳು


ಗೌರಿ ಗಣೇಶ ಹಬ್ಬದ ಶುಭಾಶಯಗಳು

ಅಮ್ಮ ಮಗನ ಆಗಮನ
ಅವನಿಯಲವರಿಗೆ ನಮನ
ಅಡಗಲಿ ಅನಿಷ್ಟ ಕೊರೊನ
ಅನುದಿನ ಅರಳಿರಲಿ ಮನ

ರವಿವಾಣಿ

Sunday, August 29, 2010

ಲಾವಣಿ ಮುಂದುವರಿದುದು.. ಭಾಗ 2

ಮಾನಸ ಪೂಜೆಯ ಮಾಡುತಲಿದ್ದರು ಸೋದೇಮಠದಲಿ ಸ್ವಾಮಿಗಳು |
ಕಲ್ಪತ ಮಾಲೆಯು ಕಲ್ಪಕಿರೀಟದಿ ತೂರದೆ ಇದ್ದರು ವ್ಯಸನದೊಳು||೨೩||

ವಾದಿರಾಜರ ಕಷ್ಟವ ತಿಳಿದನು ಕನಕನು ದಿವ್ಯ ಜ್ಞಾನದಲಿ |
ಬೇರೆ ಕಿರೀಟವ ಮಾಡಿರಿ ಎಂದು ಹೇಳಿ ಕಳಿಸಿದನು ವಿನಯದಲಿ ||೨೪||

ಕನಕದಾಸನಮಹಾತ್ಮ್ಯ ತಿಳಿದು ಗುರುಗಳಿಗಾಯಿತು ಆಶ್ಚರ್ಯ |
ಕೃಷ್ಣನ ದರ್ಶನ ಮಾಡಿಸು ಎಂದು ಗಂಟುಬಿದ್ದರು ಗುರುವರ್ಯ ||೨೫||

ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ?
ಎನ್ನುತ ಕನಕನು ಕೇಳಲು ನಾಯಿಯು ನುಡಿಯಿತು ನಡೆದುದ ಬರಾಬರಿ ||೨೬||

ನಾಯಿರೂಪದ ನಾರಾಯಣನನು ಕಾಣದೆ ಹೋದರು ಸ್ವಾಮಿಗಳು |
ಮಾಯಾಲೀಲೆಯ ನೋಡಲು ಆಗ ನೆನೆದರು ಚಿತ್ತ ಶುದ್ದಿಯೊಳು ||೨೭||

ನೆಲದಮೇಲೆ ಹಿಂಗಾಲನು ಇಟ್ಟು ಗುರುಗಳ ಹೆಗಲಲಿ ಮುಂಗಾಲಿಟ್ಟು
ಹಯರೂಪದಿ ಹರಿ ದರ್ಶನ ವಿಟ್ಟನು ಕನಕನ ಧ್ಯಾನಕೆ ಓ ಗೊಟ್ಟು ||೨೮||

ಮುಕ್ತಿಗೆ ಸಾಧನ ಯಾವುದು ಎಂದು ವ್ಯಾಸರಾಯರು ಕೇಳಿದರು|
ಶಕ್ತಿಯು ಅದಕೆ 'ನಾ-ಸತ್ತರೆ' ಎಂದು ಕನಕರು ಹೇಳಿದರು ||೨೯||

ಕನಕನ ಮಾತನು ಕೇಳಿದ ಶಿಷ್ಯರು ನಕ್ಕರು ತಾವು ಘೊಳ್ಳೆಂದು|
'ನಾ' ಎಂದರೆ ಗರ್ವವು ಎನ್ನಲು ಗುರುಗಳು ನುಡಿದರು 'ಸೈ' ಎಂದು ||೩೦ ||

ಪೆಚ್ಚು ಬಿದ್ದರು ನಕ್ಕ ಶಿಷ್ಯರು ಕನಕನ ಅರ್ಥವ ಕೇಳುತಲಿ |
ಹುಚ್ಚು ಮಾತನು ಬಿಚ್ಚಿ ಓಡಿಸಿ ಎಂದನು ಅವರಿಗೆ ವಿನಯದಲಿ ||೩೧ ||

ತಿಂಮ,ಕನಕ,ಕನಕನಾಯಕ,ಕನಕದಾಸನ ರೂಪದಲಿ |
ದೇವನ ಕಂಡು,ದೇವನ ತೋರಿಸಿ,ಅಮರನಾದನು ಭುವಿಯಲ್ಲಿ ||೩೨ ||

ಚಿತ್ತ ಭಿತ್ತಿಯಲಿ ಭಕ್ತಿಯ ಬೀಜವ ಕನಕದಾಸನು ಬಿತ್ತಿದನು |
ತೊಂಭತ್ತೆಂಟು ವರ್ಷ ತಾ ಬಾಳಿ,ತನ್ನಯ ಅಸುವನು ನೀಗಿದನು ||೩೩||

ಮೋಹ(ನ) ತರಂಗಿಣಿ ನಳ ಚರಿತ್ರೆ ಹರಿ ಭಕ್ತಿ(ಯ) ಸಾರಗಳು |
ರಾಮಧಾನ್ಯ ಚರಿತ್ರೆಗಳೆಲ್ಲಾ ಕನಕದಾಸನ ಗ್ರಂಥಗಳು ||೩೪||

ಓದಿರಿ ಕನ್ನಡ ನಾಡಿನ ಜನರೇ ಕನಕ ಗ್ರಂಥವ ಭಕ್ತಿಯಲಿ
ಮಾಡಿರಿ ಕೇಶವರಾಯನ ಧ್ಯಾನವ ಪಡೆಯಿರಿ ಮುಕ್ತಿಯ ಪರದಲ್ಲಿ ||೩೫||


ರಚನೆ : ಕೆ. ಸಿ. ಚಂದ್ರಶೇಖರ್
ಕೊಡ್ಲಿಪೇಟೆ

Tuesday, August 17, 2010

ಲಾವಣಿ

೧೪--೧೯೬೫ ಕನಕ ಜಯಂತಿಗೋಸ್ಕರ ಬರೆದ ಲಾವಣಿ.
ರಚನೆ : ಕೆ ಸಿ ಚಂದ್ರಶೇಖರ್ ಕೊಡ್ಲಿಪೇಟೆ

ಕನ್ನಡ ನಾಡಿನ ಕನ್ನಡ ಜನರೇ ಕೇಳಿರಿ ನೀವು ಒಲವಿಂದ |
ಕನಕದಾಸರ ಕಥೆಯನು ಪೇಳುವೆ ಆಲಿಸಿ ನೀವು ಮುದದಿಂದ ||ಪ||

ಧಾರವಾಡದ ಕೋಡ ತಾಲೂಕಿನ ಬಾಡ ಎಂಬುವ ಊರಲ್ಲಿ |
ಹರಿಯಪವಾಡವ ತಿಳಿಸಲು ಹುಟ್ಟಿದ ಕನಕ ಕುರುಬರ ಕುಲದಲ್ಲಿ ||೧||

ತಂದೆಯನಾಮವು ಬೀರೇಗೌಡ ಮಾಡುತಲಿದ್ದನು ಗೌಡಿಕೆಯ |
ಒಂದೇ ಮನದಲಿ ನೆನೆಯುತಲಿದ್ದನು, ತಿರುಪತಿದೇವನ ಪದದಡಿಯ ||೨||

ಮಡದಿ ಬಚ್ಚಿಯ ಪ್ರಾಯಸಂದರೂ ಕಂದನ ಭಾಗ್ಯವು ಇಲ್ಲವಾಯ್ತು |
ಒಡನೆ ಗೌಡನ ದೇವರ ಧ್ಯಾನವು ತಿರುಪತಿಯಲ್ಲಿ ಜೋರಾಯ್ತು ||೩||

ವೆಂಕಟರಮಣನು ಬ್ರಾಹ್ಮಣ ರೂಪದಿ ಬಂದನು ಗೌಡನ ಕನಸಿನಲ್ಲಿ |
ಉಂಡೆ ಪ್ರಸಾದವ ಕೊಟ್ಟಂತಾಯಿತು ಹರುಷವು ತುಂಬಿತು ಮನದಲ್ಲಿ ||೪||

ಹುಟ್ಟಿದ ಕುವರನು ಬಚ್ಚಿಯ ಉದರದಿ ಹದಿನಾರನೆಯ ಶಕದಲ್ಲಿ |
ಇಟ್ಟರು ತಿಂಮ ಎಂಬುವ ನಾಮವ ವೆಂಕರಮಣನ ನೆನಹಲ್ಲಿ ||೫||

ಬೆಳೆದನು ತಿಂಮನು ಭಗವನ್ನಾಮ ಭಗವದ್ಭಕ್ತರ ನೇಹದಲಿ |
ಅಳಿದನು ಆತನ ಒಲವಿನ ಪಿತನು ಆತನ ಆರನೆ ವಯಸಿನಲಿ ||೬||

ತನಗೆ ಸಿಕ್ಕಿದ ನಿಕ್ಷೇಪವನು ತಿಂಮನು ದಾನವ ಮಾಡಾಯ್ತು |
ದೀನ ದಲಿತರ ಜಿಹ್ವೆಲಿ ಅವಗೆ ಕನಕನೆಂಬುವ ಹೆಸರಾಯ್ತು||೭||

ಇಂತು ತಿಂಮನು ಕನಕನಾದನು ಸಂತನಾಗುವಯೋಗದಲಿ|
ಸಂತಸದಿಂದಲಿ ಆತನ ಧ್ಯಾನವು ಹರಿಯಿತು ರಮಣನ ಚರಣದಲಿ ||೮||

ಕನಕನ ಪರಹಿತ ನಿಷ್ಥೆಯಿಂದಲಿ , ದೇವನಾದನು ಸಂತುಷ್ಟ |
ದಿನದಿಂ ದಿನಕೆ ಜ್ಞಾನ ಪೌರುಷ ಹೆಚ್ಚಲು ಆದನು ಉತ್ಕೃಷ್ಟ ||೯ ||

ಹರಕೆ ಹೊತ್ತರು ಕನಕನ ಹೆಸರಲಿ, ಇಷ್ಟಸಿದ್ಧಿಯು ಜನಕಾಯ್ತು |
ತಿರುಪತಿ ಬದಲು ಕಾಣಿಕೆಯೆಲ್ಲವು ಕನಕ ಭಂಡಾರದಿ ಜಮೆಯಾಯ್ತು ||೧೦||


ಕಾಗಿನೆಲೆಯ ಉದ್ಭವ ಮೂರ್ತಿ, ಆದಿಕೇಶವ ಸ್ವಾಮಿಗೆ |
ಮಂಟಪ ಕಟ್ಟಿಸಿ ಉತ್ಸವ ಮಾಡಿದ ಕನಕನುದಿವ್ಯ ಮೂರ್ತಿಗೆ ||೧೧||

ಏಕನಿಷ್ಠೆಯಿಂ ದ್ವಾದಶ ವರ್ಷ, ಸಾಗಿತು ಆತನ ಉಪಾಸನೆ |
ಇಂತಿರಲೊಮ್ಮೆ ಸ್ವಪ್ನದಿ ಆಯಿತು ರಮಣನ ಸೇವೆಗೆ ಅಹವಾನೆ ||೧೨||

ಕೇಶವದೇವನ ನಿಷ್ಠೆಯ ತೊರೆಯಲು ಕನಕನ ಮನಕೆ ಕಹಿಯಾಯ್ತು |
ವೆಂಕಟ ರಮಣನ ಸೇವೆಯ ಮಾಡದೆ ಹೊಟ್ಟೆಯ ಶೂಲೆಯು ಜೋರಾಯ್ತು ||೧೩||

ಬಂದೆವಯ್ಯಾ ಗೋವಿಂದಶೆಟ್ಟಿಯೇ ಎಂಬುವ ಹಾಡನು ಹಾಡುತಲಿ |
ವಂದನೆ ಗೈದನು ತಿರುಪತಿಯಲ್ಲಿ ಶೂಲೆಯು ಅಡಗಿತು ಕರುಣೆಯಲಿ ||೧೪||

ಆಗಿನಕಾಲದಿ ದಾಸ ಕೂಟದಲಿ ವ್ಯಾಸರಾಯರೇ ಶಿರೋಮಣಿ |
ಯೋಗಾಭ್ಯಾಸಕೆ ಕನಕನು ಅವರಲಿ ಆದನು ಶಿಷ್ಯರ ಶಿಖಾಮಣಿ ||೧೫||

ಕುರುಬರ ಕನಕನ ಹಿರಿಮೆಯಕಂಡು ಹಿರಿಯ ಶಿಷ್ಯರು ಕರುಬಿದರು |
ವರಗುರು ಅವರಿಗೆ ಪಾಠವ ಕಲಿಸಲು ಒಂದು ಪರೀಕ್ಷೆಯ ನಡೆಸಿದರು ||೧೬||

ಗುರುಗಳು ಕೊಟ್ಟ ಹಣ್ಣನು ತಿಂದರು ಮೂಲೆಮುಡುಕಲಲಿ ಗುಟ್ಟಿನಲಿ|
ಹರಿಯ ಇರವನು ಕಂಡನು ಕನಕನು ತಿನ್ನಲು ಹೋದ ಠಾವಿನಲಿ ||೧೭||

ತಿನ್ನದೆ ಹಣ್ಣನು ಹಿಂದಕೆ ತಂದು ಗುರುಗಳಿಗದನು ಒಪ್ಪಿಸಿದ |
ಚಿನ್ಮಯ ಮೂರ್ತಿಯ ಸರ್ವಸಾಕ್ಷಿತ್ವವ ಎಲ್ಲರ ಮನಕೂ ಮುಟ್ಟಿಸಿದ ||೧೮||

ಹಾಡನು ಕಟ್ಟುತ ಹಾಡನು ಹಾಡುತ ಭಕ್ತಿಯ ಬೀಜವ ಬಿತ್ತಿದನು |
ಬಿಡದೆ ಮಾಡಿರಿ ಒಡೆಯನ ಧ್ಯಾನವ ಎನ್ನುತ ತಾನು ತಿರುಗಿದನು||೧೯||

ಉಡುಪಿ ಕೃಷ್ಣನ ದರ್ಶನಕೆಂದು ನಡೆದನು ಕನಕನು ಪ್ರೀತಿಯಲಿ |
ಮಡಿ ಮಡಿಯೆಂದು ಕಾವಲಿನವರು ಅಟ್ಟಿದರಾತನ ಹಿಂಸೆಯಲಿ ||೨೦||

ದೇವಾಲಯದ ಹಿಂಬದಿಯಲ್ಲಿ ಹಾಡುತ ಕರೆದನು ದೇವನನು |
ದೇವಕಿ ನಂದನು ಪಡುವಕೆ ತಿರುಗಿ ಭಕ್ತಗೆ ದರ್ಶನ ನೀಡಿದನು ||೨೧||

ಕನಕನು ಕೃಷ್ಣನ ಕಂಡ ಕಿಂಡಿಗೆ ಕನಕಕಿಂಡಿಯೆಂಬ್ಹೆಸರಾಯ್ತು |
ಅನುದಿನ ಅವನ ದರ್ಶನ ಭಾಗ್ಯಕೆ ಕನಕ ಕಿಂಡಿಯೇ ಮೊದಲಾಯ್ತು ||೨೨||


ಮುಂದುವರಿಯುವುದು ......

Saturday, August 7, 2010

बढ्नेवाले मुसाफिरों

ओ ओ बढ्नेवाले मुसाफिरों ...... अपने मार्ग से मत फिरो

जैसा बोलो तुम वैसा करो ,
दुनियाँ में नेक दिलवालों

आते हैं राह में टकराते रोडें
भाते हैं पावो में झंझट के झाडें ,
मुस्कातेही तुम उन सबको फाडो,
हिमंत न हारो पीछे मत मोडो ||

पनघट के पोते मरघट के नाते
करते हैं उम्मीद से हमदर्दी बातें
आफ़त में साथी कोई न होते
उल्फ़त के फूलें ठुकराए जातें ||


कवि : के सी चंद्रशेखर
कोड्लीपेट, कोडागु

Saturday, July 31, 2010

ಆ ಹೃದಯವನೇ ಕೊಚ್ಚುವೆಯಾ?

ಒಂದೇ ಮಣ್ಣಿನ ಮಕ್ಕಳು ನಾವು
ಒಂದೇ ನೀರನು ಕುಡಿದವರು
ಒಂದೇ ಗಾಳಿಯ ಸೇವಿಸಿ ಬದುಕಿ
ಒಂದೇ ಅಂಬರದಡಿ ಉಳಿದವರು |

ಆದರೆ ಒಂದೇ ಮನವಿಲ್ಲೇಕೆ?
ಪ್ರೀತಿಯ ತೆಕ್ಕೆಗೆ ಸಿಗಲೊಲ್ಲೇಕೆ?
ನಿನ್ನನು ನಾವು ಹೊಡೆದದ್ದಿಲ್ಲ ; ಬಡಿದದ್ದಿಲ್ಲ ;
ಕಡಿದದ್ದಂತೂ ಇಲ್ಲವೇ ಇಲ್ಲ ;
ಆದರೆ ನಮ್ಮನು ಕಡಿಯುವಿಯೇಕೆ?
ಜರ್ಜರ ಗಾಯವ ಮಾಡುವಿಯೇಕೆ?
ಬರ್ಬರ ಕೃತ್ಯವ ಗೈಯುವಿಯೇಕೆ?

ಕಾಡುಪ್ರಾಣಿಗಳ ಭಯವೆಮಗಿಲ್ಲ
ಹಕ್ಕಿ ಪಕ್ಷಿಗಳ ದಿಗಿಲೆಮಗಿಲ್ಲ
ಭಯವೆಂದಿದ್ದರೆ ನಿನ್ನೊಬ್ಬನದೇ
ದಿಗಿಲೆಂದಿದ್ದರೆ ನಿನ್ನೊಬ್ಬನದೇ
ಮಾನವ ನಿನಗೆ ಮತಿಯಿನಿತಿಲ್ಲ
ನಮ್ಮನು ಕಡಿದರೆ ಗತಿನಿನಗಿಲ್ಲ

ನಿನಗರಿವಿಲ್ಲದೆ ಉಸಿರನು ಕೊಟ್ಟು
ನಿನಗರಿವಿಲ್ಲದೆ ಹಸಿರನು ಕೊಟ್ಟು
ಬೇಡಿಕೆಯಿಲ್ಲದೆ ಹಣ್ಣನು ಕೊಟ್ಟು
ತಂಟೆಯ ಮಾಡದೆ ನೆರಳನು ಕೊಟ್ಟು
ತಂಪಗೆ ನಿನ್ನ ದಣಿವಾರಿಸುವೆವು
ನೆಂಟನ ತೆರದಿ ಸತ್ಕರಿಸುವೆವು;

ಪ್ರೀತಿಯ ಕರಗಳಲಪ್ಪಲು ನಾವು
ಆ ಕರಗಳನೇ ಕಡಿಯುವೆಯಾ?
ಅರ್ತಿಯ ಹೃದಯವ ತೆರೆಯಲು ನಾವು
ಆ ಹೃದಯವನೇ ಕೊಚ್ಚುವೆಯಾ?

ನಿನ್ನನು ಬಯ್ಯಲು ಬಾಯೆಮಗಿಲ್ಲ
ತಿವಿಯಲು ನಿನ್ನನು ಕೋಡೆಮಗಿಲ್ಲ
ತಪ್ಪಿಸಿ ಓಡಲು ಕಾಲೆಮಗಿಲ್ಲ
ಸೆಟೆದು ನಿಲ್ಲುವ ಶಕ್ತಿಯೂ ಇಲ್ಲ
ನೊಂದಿಹ ನಮ್ಮನು ಬಡಿಯದಿರು
ಪ್ರೀತಿಯ ಹೃದಯವ ಕೊಚ್ಚದಿರು

ರಚನೆ : ಕೆ. ಸಿ. ಚಂದ್ರಶೇಖರ್

Saturday, July 24, 2010

ಕಂದ ಬಂದು ಅಂದ ತಂದ

ಕಂದ ಬಂದು ಮನೆಗೆ ಅಂದ ತಂದಾನೇ s s s
ಚೆಂದದಿಂದ ಪರಿಮಳವ ಸೂಸ್ಯಾನೇ s s s||ಪ||

ಅವನ ಪುಟ್ಟ ಎಸಳು ಕೈಗಳೆಷ್ಟು ಬೆಚ್ಚನೇ !
ಅವನ ಅಮಲ ಕಣ್ಣನೋಟವೆಷ್ಟು ಸ್ವಚ್ಛನೇ !
ಅವನ ಮನದ ಒಳಗೆ ಇರುವುದೆಷ್ಟು ಕಲ್ಪನೇ !
ಅವನ ನಗುವು ನಿದ್ದೆಯಲ್ಲಿ ಯಾರ್ಯಾರೊಡನೇ ||೧||

ಅವನ ನಗುವು ಮನೆಯ ತುಂಬ ದನಿಯಗೊಡುತಿದೇ
ಅವನ ಅಳುವು ಮನೆಯ ಜನರ ಮನವ ಮಿಡಿದಿದೇ
ಅವನ ನಗುವಿನಳುವಿನಲ್ಲಿ ಏನು ಮಹತಿದೇ
ಅವನೆ ಬಲ್ಲ ಅವನೆ ನಲ್ಲ ಇಂದು ಮುಂದಕೇ ||೨||

ಅವನ ತುಟಿಗಳಲ್ಲಿ ಹಾಲು ಜೇನು ಸುರಿದಿದೇ
ಅವನ ಕಾಲಬೆರಳು ಅದರ ಸವಿಯ ಸವಿದಿದೇ
ಅವನ ಪುಟ್ಟ ಕಾಲಿನೊದೆತ ಹಿಗ್ಗು ತಂದಿದೇ
ಅವನ ಕೈಯ ಹೊಡೆತಗಳಿಗೆ ಸಗ್ಗವೆಟುಕಿದೇ ||೩||

"ಅಂಬಾ ಅಂಬಾ" ಎಂದು ಕರೆವ ಕರುವಿನಂದದೀ
"ಅಮ್ಮಾ ಅಮ್ಮಾ" ಎಂದು ಕರೆವ ತೊದಲು ನಾದದೀ
ಕರೆದ ಕರುವಿನೆಡೆಗೆ ಬರುವ ಗೋವಿನಂದದೀ
ಕರೆದ ಕಂದನೆಡೆಗೆ ತಾಯಿ ಬರುವಳಂದದೀ ||೪||


ರಚನೆ : ಕೆ. ಸಿ. ಚಂದ್ರಶೇಖರ್

Wednesday, July 21, 2010

ಹಾರೈಕೆ


ಏನಾದರೇನು? ಹೇಗಾದರೇನು?
ಜಡತನವು ದೂರಾಗಬೇಕು
ಸಿರಿಬಂದರೇನು? ಸಿರಿ ಹೋದರೇನು?
ಸತ್ಯತೆಯು ನೆಲೆಯಾಗಬೇಕು.


ಇಡು ಹೆಜ್ಜೆ ಮುಂದೆ, ಬರಬೇಡ ಹಿಂದೆ
ಎಡವುತ್ತ , ಬೀಳುತ್ತ , ಬಳಲುತ್ತ ಮುಂದೆ,
ಜಡವನ್ನು ಕಳೆದು, ಚೇತನವ ಪಡೆದು
ಎಡರುಗಳನ್ನೆಲ್ಲಾ ಬದಿದೋಡಿಸು.

ನಿಂದಿಪರು ಹಲರು, ವಂದಿಪರು ಕೆಲರು,
ನಿಂದ್ಯಾಭಿನಂದನೆಯ ಗೊಡವೆ ಬೇಡ ,
ಒಂದೇ ಮಾತಿನಲ್ಲಿ ದ್ವಂದ್ವಾರ್ಥ ಬರದಂತೆ
ಎಂದೆಂದಿಗೂ ನೀನು ಚುರುಕಾಗಿರು

ಸುಖ ದುಃಖವೆರಡೂ, ಒಂದಾಗಿ ಹೆಣೆದು ,
ಮುಖವಬಾಡಿಸುವವು ಅತಿಯಾಗಿ
ಸಖ ನೀನು ಮಾತ್ರ ಕೆಚ್ಚನ್ನು ತಳೆದು,
ಸುಖ ದುಃಖಗಳ ಸಹಿಸು ಸ್ಥಿರನಾಗಿ.

ಕಲಿತಿರುವೆನೆಂದು , ಪಳಗಿರುವೆನೆಂದು,
ಹೆಮ್ಮೆಯಲಿ ಮೆರೆಯುವುದು ಸರಿಯಲ್ಲ,
ಒಮ್ಮತ ಸೌಹಾರ್ದ ಅಂಕುರಿಸಲೆಂದು
ನಡೆದಂತೆ ನುಡಿಬೇಕು ಸವಿಸೊಲ್ಲ.

ಅಂತರಂಗದ ಬಯಕೆ ಚಿಂತೆಗಳ ಪರಿಹಾರ,
ಶಾಂತ ರೀತಿಯಲಿ ಕೈಗೂಡಬೇಕು.
ಜಂತು ಜೀವಿಗಳ ಧ್ಯೇಯದ ಸಾಕ್ಷಾತ್ಕಾರ
ಸಂತರ ತಪದಂತೆ ಸಿದ್ದಿಸಬೇಕು.


ರಚನೆ :
ಕೆ. ಸಿ. ಚಂದ್ರಶೇಖರ್
(ಕುದುರೇರ ಚೆನ್ನಬಸಪ್ಪ ಚಂದ್ರಶೇಖರ್)
ಕೊಡ್ಲಿಪೇಟೆ , ಕೊಡಗು ಜಿಲ್ಲೆ , ಕರ್ನಾಟಕ, ಭಾರತ